ಕೋಳ್ಯೂರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಒಕ್ಟೋಬರ್ 24 , 2013
|
ಯಕ್ಷಗಾನ ಕಲೆಗೆ ಸಮಾನವಾದ ಇನ್ನೊಂದು ಕಲೆಯಿಲ್ಲ. ಸರ್ವತೋಮುಖ ಕಲಾ ಪ್ರೌಢಿಮೆ ಮೆರೆಯಲು ಯಕ್ಷಗಾನದಿಂದ ಮಾತ್ರ ಸಾಧ್ಯ. ಸಂಗೀತ, ನೃತ್ಯ, ನವರಸ ಭಾವಗಳನ್ನು ತೋರ್ಪಡಿಸಲು ಯಕ್ಷಗಾನದಲ್ಲಿ ಮಾತ್ರ ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠದ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
|
ಡಾ| ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
|
ನಗರದ ಪುರಭವನದಲ್ಲಿ ಬುಧವಾರ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ಡಾ| ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರಶಸ್ತಿ ಔನ್ನತ್ಯ ಹೆಚ್ಚುವುದು
ಯಕ್ಷಗಾನ ಎಂಬುದು ಕಣ್ಣು, ಬುದ್ಧಿ ಹಾಗೂ ಇಂದ್ರಿಯಗಳಿಗೆ ಆಕರ್ಷಣೆಯಾಗುವ ಕಲೆ. ಇಂಥ ಕಲೆಯ ಮೇರು ಪ್ರತಿಭೆ ಮಲ್ಪೆ ಶಂಕರನಾರಾಯಣ ಸಾಮಗರು. ಅಂತಹ ಮೇರು ಪ್ರತಿಭೆಯ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ರಾಮಚಂದ್ರ ರಾವ್ ಅವರು ಯಕ್ಷಗಾನ ರಂಗದ ಉನ್ನತ ಕಲಾವಿದ. ಇದರಿಂದ ಪ್ರಶಸ್ತಿಯ ಔನ್ನತ್ಯವೂ ಹೆಚ್ಚುವುದು ಎಂದರು.
ಡಾ| ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾ ಸೇವೆಗೆ ಮಾಡುವ ಗೌರವ
ಕುಂಬ್ಳೆ ಸುಂದರ ರಾವ್ ಮಾತನಾಡಿ, ಪ್ರಶಸ್ತಿ ನೀಡುವುದು ಕಲಾ ಸೇವೆಗೆ ಮಾಡುವ ಒಂದು ವಿಶೇಷ ಗೌರವ. ಕೋಳ್ಯೂರು ಅವರು ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ಸ್ವರ ಸಾಮರ್ಥಯದಿಂದ ಹೆಚ್ಚಾಗಿ ಹೆಣ್ಣಿನ ಪಾತ್ರಗಳನ್ನು ಯಾವುದೇ ಚ್ಯುತಿ ಬಾರದಂತೆ ನಿರ್ವಹಿಸಿದ್ದಾರೆ ಎಂದರು.
ಬದುಕು ಸಾರ್ಥಕವಾಯಿತು
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಚಂದ್ರ ರಾವ್, ಸಾಮಗರಂತಹ ಶ್ರೇಷ್ಠರ ಪ್ರಶಸ್ತಿಯನ್ನು ಪಡೆಯಲು ಯೋಗ್ಯತೆ ಬೇಕು. ಪ್ರಶಸ್ತಿಗೆ ಅರ್ಹನೋ ಎಂದು ತಿಳಿಯೆನು. ಸಾಮಗರು ಯಕ್ಷಗಾನ ಕ್ಷೇತ್ರದ ವಿದ್ವಾಂಸರು. ಅಂಥವರ ಒಡನಾಟದಿಂದ ಬದುಕು ಸಾರ್ಥಕವಾಯಿತು ಎಂದರು.
ಅತಿಥಿಯಾಗಿ ಪಾಲ್ಗೊಂಡ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, ಭದ್ರಗಿರಿ ಅಚ್ಯುತ ದಾಸರ ಸವಿನೆನಪು ಮಾಡಿದರು. ಅನಂತರ ಅಚ್ಯುತದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ, ಕಲ್ಕೂರ ಪ್ರತಿಷ್ಠಾನದ ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು. ಸೇರಾಜೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅನಂತರ ನಿಡ್ಲೆ ಗೋವಿಂದ ಭಟ್ ನೇತೃತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಧರ್ಮಸœಳ ಇವರಿಂದ 'ಕಾಳಿಂಗ ಮರ್ಧನ-ಪಾಂಚಜನ್ಯ' ಯಕ್ಷಗಾನ ಬಯಲಾಟ ನಡೆಯಿತು.
"ಭದ್ರಗಿರಿ ಅಚ್ಯುತ ದಾಸರು ಹರಿಕಥಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ. ಇದು ಪುಣ್ಯಪ್ರದ ಸಾಧನೆ. ಹರಿಕಥೆಗಳ ಮೂಲಕ ಭಗವಂತನ ವಿಶೇಷತೆ ಪ್ರಚಾರ ಮಾಡುವುದರಿಂದ ಭಗವಂತನ ಅನುಗ್ರಹ ಸಿಗುವುದು. ಸಾಮಗರು ಯಕ್ಷಗಾನದಲ್ಲಿ ಮೇರು ಪ್ರತಿಭೆಯಾದರೆ ಅಚ್ಯುತದಾಸರು ಹರಿಕಥೆಯ ಮೇರು ಪ್ರತಿಭೆ." - ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಕೃಪೆ : http://www.udayavani.com
|
|
|